ಕಲಬುರಗಿ-ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ಮತ್ತು ಶುಕ್ರವಾರ ಕಲಬುರಗಿ ನಗರದ ವಿವಿಧ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ಮಾಡಿ 1.6 ಟನ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದಲ್ಲದೆ ಅಂಗಡಿ ಮಾಲೀಕರಿಗೆ 27 ಸಾವಿರ ರೂ. ದಂಡ ಸಹ ವಿಧಿಸಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರಿನ ಅಪರ ನಿರ್ದೇಶಕಿ ಪಿ.ಕೆ.ಸೆಲ್ವಿ ನೇತೃತ್ವದ ಅಧಿಕಾರಿಗಳ ತಂಡವು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ರಾಮದೇವ ಟ್ರೇಡರ್ಸ್, ವಿಕಾಸ ಟ್ರೇಡರ್ಸ್ , ಮಹಾದೇವಿ ಟ್ರೇಡರ್ಸ್ ಹಾಗೂ ಬಸ್ ಸ್ಟ್ಯಾಂಡ್ ಹತ್ತಿರದ ಬನಶಂಕರಿ ಟ್ರೇಡರ್ಸ್ ಹಾಗೂ ಸ್ವಾಮಿ ಅಂಗಡಿ ಮೇಲೆ ದಾಳಿ ನಡೆಸಿ ಸುಮಾರು 1.6 ಟನ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿಯೇ ರಸೀದಿ ನೀಡಿ ದಂಡ ಪಡೆದಿದಲ್ಲದೆ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಣೆ, ಮಾರಾಟ, ಬಳಕೆ ಮಾಡದಂತೆ‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ‌. ಈ‌‌ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಆದಮ್ ಸಾಬ್ ಪಟೇಲ್, ಸುಧಾರಾಣಿ, ಶಾರದಾ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಕೆ. ಎಸ್.ಪಾಟೀಲ್, ಸಿದ್ದಲಿಂಗ, ದೀಪಕ್ ಚೌಹಾಣ್ ಹಾಗೂ ಧನರಾಜ್ ಇದ್ದರು.

error: Content is protected !!