
ಹಾವೇರಿ: ಎಟಿಎಂ ಕಾರ್ಡ್ ವಂಚನೆ ನಡೆಸಿದ ಪ್ರಕರಣದಲ್ಲಿ ಹಿರೇಮೊರಬ ಗ್ರಾಮದ ಗಿರೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಘಟನೆ ಹೀಗಿದೆ— ಪಟ್ಟಣದ ಎಸ್ಬಿಎಂ ಬ್ಯಾಂಕ್ ಎದುರಿನ ಎಟಿಎಂನಲ್ಲಿ ಭಾಗ್ಯಜ್ಯೋತಿ ನಗರ ನಿವಾಸಿ ಕೆ. ದಾದಾಪೀರ್ ಅವರು ಮಿನಿ ಸ್ಟೇಟ್ಮೆಂಟ್ ಪಡೆಯಲು ತೆರಳಿದ್ದರು. ಈ ವೇಳೆ, ಗಿರೀಶ್ ಅವರು ಚಾಣಾಕ್ಷತನದಿಂದ ಅವರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ, ಬೇರೊಂದು ಕಾರ್ಡ್ ಇಟ್ಟು ಮೋಸ ಮಾಡಿದ್ದಾನೆ.
ಕಾರ್ಡ್ ಬದಲಾವಣೆ ನಡೆದಿರುವುದು ಗಮನಿಸದೆ ದಾದಾಪೀರ್ ಎಟಿಎಂನಿಂದ ಹೊರ ಬಂದ ಬಳಿಕ, ಆರೋಪಿ ಗಿರೀಶ್ ಅವರ ಕಾರ್ಡ್ ಬಳಸಿ ₹30,000 ಹಣ ಡ್ರಾ ಮಾಡಿಕೊಂಡಿದ್ದಾನೆ. ಈ ಕುರಿತು ದಾದಾಪೀರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮುಂದಿನ ತನಿಖೆ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ.