ಧಾರವಾಡ: ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಿದ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಘಂಟಿಕೇರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರೆಂದರೆ ಕೃಷ್ಣಾ ಇಂದರಗಿ, ಸುನೀಲ ಕನ್ನೇಶ್ವರ, ಸತೀಶ್ ಇಂದರಗಿ ಮತ್ತು ಕುಮಾರ್ ಬಿ.ಎಸ್. ಎನ್ನಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಾಟೀಲ್ ಗಲ್ಲಿಯಲ್ಲಿರುವ ಮಧು ಎಂಬುವವರು ಮಧು ಬೇಕರಿ ನಡೆಸುತ್ತಿದ್ದರು. ಇದೇ ವೇಳೆ ಒಂದು ದಿನ ಯುವತಿಯೋರ್ವಳು ಬೇಕರಿಗೆ ಬಂದು ಮಧುವಿಗೆ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿದ್ದಾಳೆ. ಕಾಲಕ್ರಮೇಣ ಇಬ್ಬರ ನಡುವೆ ಸನ್ನಿಹಿತತೆ ಹೆಚ್ಚಾಗಿದ್ದು, ಮಧು ಕೂಡಾ ಯುವತಿಗೆ ಕಾಲ್ ಮಾಡುತ್ತಿದ್ದನೆಂಬ ಮಾಹಿತಿ ಲಭಿಸಿದೆ.

ಈ ಸಂಬಂಧವಾಗಿ ಮಧುವನ್ನು ಯುವತಿಯ ಗುಂಪು ತನ್ನ ವಶಕ್ಕೆ ತೆಗೆದುಕೊಂಡು ಹಲ್ಲೆಗೊಳಪಡಿಸಿ, ಆತನ ಕುಟುಂಬದಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊದಲು 50,000 ರೂಪಾಯಿ ಮೊತ್ತವನ್ನು ಫೋನ್ ಪೇ ಮೂಲಕ ಪಡೆದುಕೊಂಡು, ನಂತರದ ದಿನಗಳಲ್ಲಿ ಮತ್ತಷ್ಟು ಹಣವನ್ನು ನೀಡುವಂತೆ ನಿರಂತರ ಬೆದರಿಕೆ ಹಾಕಿದ್ದಾರೆ.

ಈ ಎಲ್ಲಾ ಚಟುವಟಿಕೆಯಿಂದ ತೀವ್ರ ಬಳಲಿದ್ದ ಮಧು ಕುಟುಂಬಸ್ಥರು ಘಂಟಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಹನಿಟ್ರ್ಯಾಪ್ ಜಾಲವನ್ನು ಪತ್ತೆ ಹಚ್ಚಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯು ನಗರದಲ್ಲಿ ಭಯ ಮತ್ತು ಆತಂಕ ಮೂಡಿಸಿದ್ದು, ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.

Related News

error: Content is protected !!