ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಪಾಳ್ಯ ಹೋಬಳಿ, ಕಡಬೂರು ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಕ್ಲಿನಿಕ್ ಮೇಲೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಕ್ಲಿನಿಕ್‌ ಅನ್ನು ಜಪ್ತಿ ಮಾಡಿದ್ದು, ಅಲ್ಲಿನ ನಕಲಿ ವೈದ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಕಲಿ ವೈದ್ಯರ ಜಾಲ ಬಯಲಾಗಿದೆಯಾ?

ಶ್ರೀನಿವಾಸಾಚಾರಿ ಎಂಬುವವರು ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ, ಯಾವುದೇ ಅಧಿಕೃತ ಪರವಾನಗಿ ಪಡೆಯದೇ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆ.ಪಿ.ಎಂ.ಇ. (KPME) ನೋಂದಣಿಯಿಲ್ಲದೆ ಸೇವೆ ಸಲ್ಲಿಸುತ್ತಿದ್ದ ಈ ವೈದ್ಯ, ಜನರ ಜೀವದೊಂದಿಗೆ ಆಟವಾಡುತ್ತಿದ್ದುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಧಿಕೃತರ ದಾಳಿ ಮತ್ತು ಎಚ್ಚರಿಕೆ

ಹೈಕೋರ್ಟ್ ಆದೇಶದಂತೆ ಈ ವ್ಯಕ್ತಿಗೆ ಕ್ಲಿನಿಕ್‌ ನಡೆಸುವ ಅಧಿಕಾರವಿಲ್ಲ. ದಾಳಿ ನಡೆಸಿದ ಆರೋಗ್ಯಾಧಿಕಾರಿಗಳು ಕ್ಲಿನಿಕ್ ಬಾಗಿಲಿಗೆ ನೋಟಿಸ್ ಲಗತ್ತಿಸಿ, ತಕ್ಷಣವೇ ಅದನ್ನು ಮುಚ್ಚಿದರು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್ ರೆಡ್ಡಿ, ಆರೋಗ್ಯ ಇಲಾಖೆಯ ಪ್ರಾಧಿಕೃತ ಅಧಿಕಾರಿಗಳು, ಮತ್ತು KPME ಅಧಿಕಾರಿಗಳು ಹಾಜರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಇಲಾಖೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, ನಕಲಿ ವೈದ್ಯಕೀಯ ಕೇಂದ್ರಗಳು ಹಾಗೂ ಅವುಗಳಿಗೆ ಬಾಡಿಗೆ ನೀಡುವ ಮಾಲೀಕರು ಕೂಡ ಕಾನೂನುನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಯಾವುದೇ ಅನುಮಾನಾಸ್ಪದ ಕ್ಲಿನಿಕ್ ಬಗ್ಗೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜನತೆಗೂ ಮನವಿ ಮಾಡಲಾಗಿದೆ.

ಕಾನೂನು ಕ್ರಮ

ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ, ನಕಲಿ ವೈದ್ಯಕೀಯ ಕೇಂದ್ರಗಳ ಮೇಲೆ ಮತ್ತಷ್ಟು ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!