ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಮೂಲದವನಾದ ತುಕಾರಾಂ ದಾಂಡೇಲಿಗೆ ಮದುವೆ ಕಾರ್ಯಕ್ರಮ ಒಂದಕ್ಕೆ ಫೋಟೋಗ್ರಾಫರ್ ಆಗಿ ಹೋಗಿದ್ದು ಅಲ್ಲಿ ಎರಡು ಮಕ್ಕಳ ತಾಯಿಯಾದಂತಹ ಶಾಂತಕುಮಾರಿ ಎಂಬಾಕೆಯನ್ನು ಕಂಡಿರುತ್ತಾನೆ.  ನಂತರ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿರುತ್ತದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ ಶಾಂತಕುಮಾರಿ ಗಂಡನನ್ನು ಬಿಟ್ಟು, ತುಕಾರಾಮನ ಜೊತೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ  ತೇರಗಾಂವ್ ಎಂಬ ಹಳ್ಳಿಗೆ ಓಡಿ ಹೋಗಿ ಜೀವನ ನಡೆಸುತ್ತಿರುತ್ತಾಳೆ. ಈ ರೀತಿ ಓಡಿ ಹೋದ ಬಳಿಕ ಎರಡು ವರ್ಷಗಳ ಕಾಲ ಸುಖವಾಗಿಯೇ ಇರುತ್ತಾರೆ ಇದರ ಮಧ್ಯೆ ಶಾಂತಕುಮಾರಿಗೆ ತುಕಾರಾಮನ ಮೇಲೆ ಅನುಮಾನ ಹುಟ್ಟಲು ಆರಂಭಿಸುತ್ತದೆ. ತುಕಾರಾಮ ಮಹಿಳೆಯರ ಜೊತೆ ಸಾಮಾನ್ಯವಾಗಿ ಮಾತನಾಡಿದರು ಸಹ ಶಾಂತಕುಮಾರಿ ಅನುಮಾನ ಪಡುತ್ತಿದ್ದಳು. ಈ ವಿಚಾರವಾಗಿ ತುಕಾರಾಂ ಬೇಸತ್ತು ಹೋಗಿರುತ್ತಾನೆ. ಒಂದು ಕಡೆ ಆಕೆಯ ಅನುಮಾನದ ಹುಚ್ಚು ಹೆಚ್ಚಾಗುತ್ತಿದ್ದಂತೆ ಇತ್ತ ಈತ ತಾಳ್ಮೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ಹೆಂಡತಿಗೆ ಅನುಮಾನ ಹೆಚ್ಚಾಗಬಾರದು ಗಂಡನಿಗೆ ಕೋಪ ಮಿತಿಮೀರ ಬಾರದು ಎರಡು ಹುಚ್ಚೆದ್ದು ಕುಣಿದರೆ ಏನಾಗಬಹುದು ಅಂತಹದೊಂದು ಘಟನೆ ಇವರಿಬ್ಬರ ನಡುವೆ ನಡೆದಿದೆ. ಆಕೆಯ ಅನುಮಾನದ ಹುಚ್ಚನ್ನು ತಾಳಲಾರದ ತುಕಾರಾಂ ತುಕಾಲಿ ಕೆಲಸ ಒಂದಕ್ಕೆ ಮುಂದಾಗುತ್ತಾನೆ.
ಅದೇನೆಂದರೆ, ಆಕೆ ಗಂಡನನ್ನು ಬಿಟ್ಟು ಈತನ ಜೊತೆ ಪ್ರೀತಿ ಮಾಡಿ ಓಡಿ ಬಂದಿದ್ದರೂ ಸಹ ಈ ಎಲ್ಲಾ ವಿಚಾರಗಳನ್ನು ಮರೆತು ಆಕೆಯನ್ನೇ ಕೊಲೆ ಮಾಡಲು ಸ್ಕೆಚ್ ಹಾಕುತ್ತಾನೆ. ಫೆಬ್ರವರಿ 22ನೇ ತಾರೀಖಿನಂದು ಶಾಂತಕುಮಾರಿಯನ್ನು ಕೊಂದ ತುಕಾರಾಂ ಮನೆಯಲ್ಲೇ ಇರುವಂತಹ ಡ್ರಮ್ಮಿನ ಒಳಗೆ ಮುಚ್ಚಿ ಇಡುತ್ತಾನೆ. ನಂತರ ರಾತ್ರಿಯೆಲ್ಲ ಉಪಾಯ ಮಾಡಿ ಮರುದಿನ ವಾಹನವನ್ನು ಕರೆಸಿ ಚಾಲಕ ಹಾಗೂ ಒಬ್ಬ ಹಮಾಲಿಯ ಸಹಾಯ ಪಡೆದು ಕಸ ಎಸೆಯಬೇಕೆಂದು ಕರೆದುಕೊಂಡು ಹೋಗಿ ಡ್ರಮ್ಮಿನಲ್ಲಿರುವಂತಹ ಶಾಂತಕುಮಾರಿ ದೇಹವನ್ನು ಕಾಡಿನಲ್ಲಿ ಎಸೆದು ಬರುತ್ತಾನೆ. ಸ್ಥಳೀಯರು ಅನುಮಾನಗೊಂಡು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಇವರು ಹಿಂತಿರುಗಿ ಬರುವಷ್ಟರಲ್ಲಿ ಪೊಲೀಸರು ತುಕಾರಾಮನಿಗಾಗಿ ಹೊಂಚು ಹಾಕಿಕೊಂಡು ಕಾಯುತ್ತಾ ಕುಳಿತಿರುತ್ತಾರೆ.  ಶವವನ್ನು ಎಸೆದು ಬಂದ ತುಕಾರಾಂ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿರುತ್ತಾರೆ.

error: Content is protected !!