
ಬಾಗಲಕೋಟೆ: ಕರ್ತವ್ಯಲೋಪ ಮತ್ತು ಅವ್ಯವಹಾರದ ಆರೋಪ ಎದುರಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಮೆಹಬೂಬ ತುಂಬರಮಟ್ಟಿ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.
₹26 ಲಕ್ಷ ದುರುಪಯೋಗ, ಟೆಂಡರ್ದಾರರ ಬಾಕಿ ಹಣ
ಇಲಾಖೆಯ ವಸತಿ ನಿಲಯಗಳಲ್ಲಿ ಊಟ ಮತ್ತು ಮೂಲಸೌಕರ್ಯ ಒದಗಿಸುವ ಸಂಬಂಧ ಸುಮಾರು ₹26 ಲಕ್ಷ ಹಣ ದುರುಪಯೋಗಗೊಂಡಿರುವುದು ಹಾಗೂ ಆಹಾರ ಸರಬರಾಜುದಾರರಿಗೆ ಹಣ ಪಾವತಿ ಮಾಡಲಾಗದೆ ಉಳಿದಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.
ಅಧಿಕಾರಿಗಳ ತನಿಖಾ ವರದಿ
ಈ ಕುರಿತು ಅಧಿಕಾರಿಗಳ ತಂಡ ತನಿಖೆ ನಡೆಸಿದ್ದು, ದಾಖಲೆಗಳಲ್ಲಿ ಅಕ್ರಮಗಳು ಕಂಡು ಬಂದಿದ್ದು, ನಿಗದಿತ ನಿಯಮಗಳು ಪಾಲನೆಯಾಗಿಲ್ಲ ಎಂಬುದು ವರದಿಯ ಮುಖ್ಯನಿಷ್ಕರ್ಷೆ. ಈ ವರದಿ ಆಧಾರದ ಮೇಲೆ ಮೇಹಬೂಬ ತುಂಬರಮಟ್ಟಿಯನ್ನು ಅಮಾನತು ಮಾಡಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಯಲಿದೆ ಎಂದು ಅಧೀನ ಕಾರ್ಯದರ್ಶಿ ಉಮಾದೇವಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.