
ಕೊಟ್ಟೂರು ತಾಲೂಕಿನ ಮೊತಿಕಲ್ ತಾಂಡ ಗ್ರಾಮದ ಮನೋಜ್ ನಾಯ್ಕ್ (32) ಅವರನ್ನು ಅಪರಿಚಿತ ಆಟೋ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.
ಘಟನೆ ವಿವರ:
ಮನೋಜ್ ನಾಯ್ಕ್ ತಮ್ಮ ಗ್ರಾಮದಿಂದ ಮಡ್ರಳ್ಳಿ ಗ್ರಾಮದ ತೇರಿಗೆ ತೆರಳಿ, ಪೂಜೆ ಮುಗಿಸಿಕೊಂಡು ವಾಪಸ್ಸು ತಮ್ಮ ಗ್ರಾಮದತ್ತ ಮೋಟರ್ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದರು. ತೂಲಹಳ್ಳಿ ಮಾರ್ಗವಾಗಿ ಚಿನ್ನನಹಳ್ಳಿ ರಸ್ತೆಯ ಮಂಗನಹಳ್ಳಿ ಕ್ರಾಸ್ ಬಳಿ, ಎದುರುಗಡೆಯಿಂದ ಬಂದ ಅಜಾಗರೂಕ ಆಟೋ ಚಾಲಕ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಬಲವಾದ ಪೆಟ್ಟು ಮತ್ತು ತೀವ್ರ ರಕ್ತಗಾಯಗೊಂಡ ಮನೋಜ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಟೋ ಚಾಲಕ ಪರಾರಿಯಾಗಿದ್ದಾನೆ
ಡಿಕ್ಕಿ ಹೊಡೆಸಿದ ಆಟೋ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದೆ. ಮಗನ ಸಾವಿಗೆ ಕಾರಣವಾದ ಆಟೋ ಪತ್ತೆ ಮಾಡಿ, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಪರಿಚಿತ ಆಟೋ ಮತ್ತು ಚಾಲಕನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ವರದಿ: ಬಿ. ಮಣಿಕಂಠ