
ಗದಗ ಜಿಲ್ಲೆ ಮುಂಡರಗಿಯಲ್ಲಿ ಬಸ್ ಹತ್ತುವ ಕುರಿತಂತೆ ನಡೆದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿ, ಮೂವರು ಯುವಕರು ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಮುಂಡರಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಮುಂಡರಗಿಯಿಂದ ಹಿರೇವಡ್ಡಟ್ಟಿಗೆ ತೆರಳಬೇಕಿದ್ದ ಬಸ್ ನಲ್ಲಿ, ಪ್ರಯಾಣಿಕರಿಬ್ಬರು ಬಸ್ ಹತ್ತುವ ಸಂದರ್ಭದಲ್ಲಿ ಎದುರಾದ ಜಗಳವು ತೀವ್ರ ಸ್ವರೂಪ ಪಡೆದಿತು.
ಬಸ್ ಕಂಡಕ್ಟರ್ ಶರಣಪ್ಪ ಬಿದರಹಳ್ಳಿ ಅವರು, “ಮುಂದಕ್ಕೆ ಬನ್ನಿ” ಎಂದು ಸೂಚನೆ ನೀಡಿದ ವೇಳೆ, ಆಕ್ಷೇಪ ವ್ಯಕ್ತಪಡಿಸಿದ ಮೂವರು ವ್ಯಕ್ತಿಗಳು ಗಲಾಟೆ ಆರಂಭಿಸಿದರು. ಮಾತಿನ ಏರುಪೇರಾದ ಬಳಿಕ, ಅವರು ಥಳಿಸಿ ಕೈ ಹಾಗೂ ಕಾಲಿಗೆ ಗಂಭೀರ ಗಾಯಗೊಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಶರಣಪ್ಪ ಅವರನ್ನು ತಕ್ಷಣವೇ ಮುಂಡರಗಿ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.