ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ನಡೆದ ಘಟನೆಯೊಂದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಬಿಜೆಪಿ ಘಟಕದ ಅಧ್ಯಕ್ಷ ಹನುಮಂತೇಗೌಡ ತಮ್ಮ ಗುಂಪಿನೊಂದಿಗೆ ನಿಂತಿದ್ದರು. ಈ ವೇಳೆ, ಪಿಎಸ್‌ಐ ಗಾದಿಲಿಂಗಪ್ಪ ಸ್ಥಳಕ್ಕೆ ಆಗಮಿಸಿ ಅವರನ್ನು ಪ್ರಶ್ನಿಸಿದರು. ಮಾತಿಗೆ ಮಾತು ಬೆಳೆದ ಪರಿಣಾಮ, ಹನುಮಂತೇಗೌಡ ಅವಾಚ್ಯ ಶಬ್ದ ಬಳಸಿದರೆಂದು ಹೇಳಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡ ಪಿಎಸ್‌ಐ, ಅವರ ಕಪಾಳಕ್ಕೆ ಬಾರಿಸಿರುವುದಾಗಿ ತಿಳಿದುಬಂದಿದೆ.

ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಎಸ್‌ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ, ಹನುಮಂತೇಗೌಡ ಕೂಡಲೇ ಪೊಲೀಸರು ವಶಕ್ಕೆ ಪಡೆದರು. ಹನುಮಂತೇಗೌಡ, ತನ್ನ ಮೇಲೆ ಪೊಲೀಸರಿಂದಲೇ ಹಲ್ಲೆಯಾಗಿದೆ ಎಂದು ಪ್ರತ್ಯುತ್ತರ ಆರೋಪ ಮಾಡಿ, ಎದೆ ನೋವಿನ ದೂರು ನೀಡಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ಹಿಂದಿನ ವಿವರ: ಪರಸ್ಪರ ಆರೋಪಗಳು

ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರ ಕಾರು ಚಾಲಕ ರಂಗಸ್ವಾಮಿ ಪ್ರಕಾರ, ಪಿಎಸ್‌ಐ ಗಾದಿಲಿಂಗಪ್ಪ ಅವರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಅವರು ಏಕವಚನದಲ್ಲಿ ಮಾತನಾಡಿದರೆಂದು ಆರೋಪಿಸಿದ್ದಾರೆ. ಹನುಮಂತೇಗೌಡ ಗೌರವಯುತವಾಗಿ ಮಾತನಾಡಲು ಕೇಳಿದರೂ, ಪಿಎಸ್‌ಐ ಅವಾಚ್ಯ ಶಬ್ದ ಬಳಸಿದರೆಂದು ಹೇಳಿದ್ದಾರೆ. ಈ ಸಂಬಂಧ ನೂಕಾಟ-ತಳ್ಳಾಟ ನಡೆದು, ನಂತರ ಪಿಎಸ್‌ಐ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯಿಂದ ಕಠಿಣ ಪ್ರತಿಕ್ರಿಯೆ

ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, “ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ. ಚಿತ್ರದುರ್ಗದಲ್ಲಿ ಪಿಎಸ್‌ಐ ಗಾದಿಲಿಂಗಪ್ಪ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ. ಇದನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ,” ಎಂದು ಹೇಳಿದ್ದಾರೆ.

ಅಲ್ಲದೇ, ಈ ಘಟನೆ ರಾಜಕಾರಣ ಪ್ರೇರಿತ ಎಂದು ಆರೋಪಿಸಿರುವ ಅವರು, ಪಿಎಸ್‌ಐ ಗಾದಿಲಿಂಗಪ್ಪ ಅವರನ್ನು ತಕ್ಷಣ ಅಮಾನತು ಮಾಡಬೇಕು, ಇಲ್ಲದಿದ್ದರೆ ಬಿಜೆಪಿ ಹೋರಾಟ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

Related News

error: Content is protected !!