
ನಗರದ ಶಾಂತಿನಿಕೇತನ ಕಾಲೋನಿಯ ಲಲಿತಾ ಎಂಬ ಮಹಿಳೆ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವೇಳೆ, ಪತಿ ಕಳೆದ ವರ್ಷವೇ ವಿಚ್ಛೇದನ ಪಡೆದಿದ್ದಾನೆ ಎಂಬ ವಿಚಾರ ತಿಳಿದು ಆಕ್ರೋಶಗೊಂಡು, ಕೋರ್ಟ್ ಆವರಣದಲ್ಲೇ ಸಹೋದರಿಯೊಂದಿಗೆ ಸೇರಿ ಪತಿಗೆ ಥಳಿಸಿದ ಘಟನೆ ಸೋಮವಾರ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಲಿತಾ ವಾಯವ್ಯ ಸಾರಿಗೆ ಸಂಸ್ಥೆಯ ನೌಕರನಾದ ಬೆಳಗಾವಿ ಜಿಲ್ಲೆ ರಾಮದುರ್ಗದ ಕುಮಾರನ ವಿರುದ್ಧ ಜೀವನಾಂಶಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದರು. ಆದರೆ, ನ್ಯಾಯಾಲಯದಲ್ಲಿ ಹಾಜರಾಗಿದ್ದಾಗ, ಕುಮಾರ ಕಳೆದ ವರ್ಷ ಜೂನ್ ತಿಂಗಳಲ್ಲೇ ರಾಮದುರ್ಗ ಕೋರ್ಟ್ನಲ್ಲಿ ವಿಚ್ಛೇದನ ಪಡೆದಿರುವುದು ತಿಳಿದುಬಂದಿತು. ಈ ವಿಷಯ ತಿಳಿದ ಲಲಿತಾ, ವಿಚ್ಛೇದನಕ್ಕಾಗಿ ತನ್ನ ನಕಲಿ ಸಹಿಯನ್ನು ಬಳಸಲಾಗಿದೆ ಎಂದು ಆರೋಪಿಸಿ, ತೀವ್ರ ಸಿಟ್ಟಿಗೆದ್ದರು.
ಆಕ್ರೋಶದಲ್ಲಿ, ತಮ್ಮ ಸಹೋದರಿಯೊಂದಿಗೆ ಸೇರಿ ಪತಿಗೆ ಹಲ್ಲೆ ನಡೆಸಿದರು. ಈ ಸಂದರ್ಭ ಅಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಮಧ್ಯಪ್ರವೇಶಿಸಿ, ಕುಮಾರನನ್ನು ಮಹಿಳೆಯರಿಂದ ಬಿಡಿಸಿ ಕಳುಹಿಸಿದರು. ಘಟನೆಯ ವಿಡಿಯೋ ಅಲ್ಲಿದ್ದ ಸ್ಥಳೀಯರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.