
ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ನಟಿ ಶರಣ್ಯ ಶೆಟ್ಟಿ ಹೆಸರು ದುರ್ಬಳಕೆ ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಖದೀಮರು ನಕಲಿ ನಂಬರ್ ಬಳಸಿಕೊಂಡು, ಅದಕ್ಕೆ ನಟಿಯ ಫೋಟೋ ಡಿಸ್ಪ್ಲೇ ಪಿಕ್ಚರ್ (DP) ಇಟ್ಟು, ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವುದಾಗಿ ವರದಿಯಾಗಿದೆ. ಈ ಕುರಿತು ಶರಣ್ಯ ಸ್ವತಃ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿಯ ಹೆಸರನ್ನು ಬಳಸಿಕೊಂಡು ವಂಚನೆ ನಡೆಸುತ್ತಿರುವ ಬಗ್ಗೆ ಅವರು ಖುದ್ದಾಗಿ ಸ್ಪಷ್ಟನೆ ನೀಡಿದ್ದಾರೆ. “ನನ್ನ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಆದರೆ, ಆ ನಂಬರ್ ನನ್ನದು ಅಲ್ಲ. ಇದೊಂದು ನಕಲಿ ನಂಬರ್, ದಯವಿಟ್ಟು ಅದನ್ನು ನಂಬಿ ಯಾರು ಹಣ ಕಳುಹಿಸಬೇಡಿ,” ಎಂದು ಶರಣ್ಯ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಹಾಗೂ, ವಂಚಕರು ಟ್ರೂ ಕಾಲರ್ನಲ್ಲೂ ಶರಣ್ಯ ಶೆಟ್ಟಿ ಹೆಸರನ್ನು ಬಳಸಿ, ಹೀರೋಯಿನ್ಸ್ ಡಿಟೈಲ್ಸ್ ಪಡೆಯಲು ಪ್ರಯತ್ನಿಸುತ್ತಿರುವ ಸಂಗತಿ ಕೂಡ ಬೆಳಕಿಗೆ ಬಂದಿದೆ. ಈ ತಂತ್ರಗಾರಿಕೆಯಿಂದ ಜನರನ್ನು ವಂಚಿಸಲು ಯತ್ನಿಸುತ್ತಿರುವ ಈ ದುಷ್ಕರ್ಮಿಗಳ ವಿರುದ್ಧ ತಾವು ಸೈಬರ್ ಕ್ರೈಂ ಇಲಾಖೆಗೆ ದೂರು ನೀಡುತ್ತಿರುವುದಾಗಿ ನಟಿ ತಿಳಿಸಿದ್ದಾರೆ.
ಜನಪ್ರಿಯ ನಟಿ ಶರಣ್ಯ ಶೆಟ್ಟಿ
ಶರಣ್ಯ ಶೆಟ್ಟಿ, ಕಿರುತೆರೆಯ ‘ಗಟ್ಟಿಮೇಳ’ ಸೀರಿಯಲ್ನಲ್ಲಿ ಖಳನಾಯಕಿಯಾಗಿ ಗಮನ ಸೆಳೆದವರು. ನಂತರ ಅವರು ಹಲವಾರು ಹಿರಿತೆರೆ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ, ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಯೂ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಘಟನೆ ಸಂಬಂಧ, ಶರಣ್ಯ ಅಭಿಮಾನಿಗಳಿಗೆ ಎಚ್ಚರಿಕೆ ನೀಡುತ್ತಾ, ಯಾವುದೇ ವಂಚನೆಗೊಳಗಾಗದಂತೆ ಜಾಗರೂಕರಾಗುವಂತೆ ಮನವಿ ಮಾಡಿದ್ದಾರೆ.