ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 40 ವರ್ಷದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಮಾನಭಂಗ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಅಕ್ಟೋಬರ್ 15 ರಂದು ನಡೆದಿದ್ದರೂ, ಶನಿವಾರ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್‌ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿಯ ಪತ್ನಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಂಎಲ್‌ಸಿ ಸುರೇಶ್ ಧಾಸ್ ಅವರ ಪತ್ನಿ ಪ್ರಜಕ್ತಾ ಧಾಸ್ ಅವರು ತಮ್ಮ ಸಹಚರರಾದ ರಾಹುಲ್ ಜಗದಾಳೆ ಮತ್ತು ರಾಘವ್ ಪವಾರ್ ಅವರೊಂದಿಗೆ ತಮ್ಮ ಪೂರ್ವಜರ ಜಮೀನನ್ನು ಬಲವಂತವಾಗಿ ಕಬಳಿಸಲು ಯತ್ನಿಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.
ತಾನು ತನ್ನ ಗಂಡ ಮತ್ತು ಸೊಸೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಧಾಸ್ ತನ್ನಿಬ್ಬರು ಸಹಚರರೊಂದಿಗೆ ತಮ್ಮ ಹೊಲಕ್ಕೆ ನುಗ್ಗಿ, ಈ ಜಮೀನು ತನಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ, ಈ ಜಮೀನು 65 ವರ್ಷಗಳಿಂದ ಅದು ತಮ್ಮ ಕುಟುಂಬದ ವಶದಲ್ಲಿದೆ ಎಂದು ಹೇಳಿದಾಗ ಪ್ರಜಕ್ತಾ ಧಾಸ್ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಲು ಆದೇಶಿಸಿದ್ದಾರೆ, ಅದರಂತೆ ಜಗದಾಲಿ ಮತ್ತು ಪವಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಬಿಜೆಪಿ ಎಂಏಲ್‌ಸಿಯ ಪತ್ನಿಯ ಕೈವಾಡ ಇರುವುದರಿಂದ ರಾಜಕೀಯವಾಗಿಯೂ ಈ ಪ್ರಕರಣ ಗಮನ ಸೆಳೆದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.

error: Content is protected !!