ನವೆಂಬರ್ 12 ರಂದು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತೋಷ್ ಮುರಗೋಡ್ ಕೊಲೆಯಾಗಿತ್ತು. ಜಂಗ್ಲಿ ಪೇಟೆ ಸಂತೋಷ್ ಕೊಲೆ ಪ್ರಕರಣ ಖಂಡಿಸಿ ಸ್ಥಳೀಯ ನಿವಾಸಿಗಳು, ಕುಟುಂಬದ ಸದಸ್ಯರು ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ್ದರು. ಆರೋಪಿಗೆ ಪೊಲೀಸರ ರಕ್ಷಣೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಪ್ರಸಾದ್ ಅಬ್ಬಯ ಸ್ವತಃ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ರೌಡಿ ಶೀಟರ್ ಶಿವಾನಂದ್ ಗೆ ಕಸಬಾ ಪೇಟೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಮುಖ್ಯ ಕಾರಣ ರೌಡಿ ಶೀಟರ್ ಶಿವಾನಂದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದ. ಅದೇ ಕುಮ್ಮಕ್ಕಿನಿಂದ ಆತ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಪೆಟ್ರೋಲ್ ಕದಿಯುವುದು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಅವನನ್ನು ಹದ್ದುಬಸ್ತಿನಲ್ಲಿಡುವಂತೆ ಸ್ಥಳೀಯರು ಒತ್ತಾಯಿಸಿದ್ದರೂ ಕಸಬಾಪೇಟೆ ಪೊಲೀಸರು ತಲೆಕೆಡೆಸಿಕೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಪಿಐ ಅಡಿವೆಪ್ಪ ಬನ್ನಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಬೆನ್ನಹಿಂದೆಯೇ ಕಸಬಾಪೇಟೆ ಪೊಲೀಸ್ ಇನ್ಸ್​ಪೆಕ್ಟರ್ ಅಡಿವೆಪ್ಪ ಬನ್ನಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಭೂರಾಮ್ ಆದೇಶ ಹೊರಡಿಸಿದ್ದರು. ವರ್ಗಾವಣೆಯ ಬೆನ್ನ ಹಿಂದೆಯೇ ಅಮಾನತು ಆದೇಶ ಹೊರಡಿಸಿದ್ದರಿಂದ ಅಡಿವೆಪ್ಪ ಆಘಾತಕ್ಕೆ ತುತ್ತಾಗಿದ್ದ ಎನ್ನಲಾಗಿದೆ. ಹೈ ಬಿಪಿಯಾಗಿ ಆತ ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯಿಂದಲೇ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

error: Content is protected !!