ಶೌರ್ಯ ಏರ್​ಲೈನ್ಸ್​ನ 9ಎನ್​-ಎಎಂಇ (ಸಿಆರ್​ಜೆ 200) ವಿಮಾನ ಟೇಕಾಫ್​ ಆಗುವ ವೇಳೆ ಪತನಗೊಂಡು 18 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಜುಲೈ 24ರ ಬೆಳಗ್ಗೆ ನಡೆದಿದೆ.

ವಿಮಾನದಲ್ಲಿ ಪೈಲಟ್​ ಸೇರಿ 19 ಮಂದಿ ಇದ್ದರು. 18 ಮಂದಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ವಿಮಾನದ ಅವಶೇಷಗಳಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ 37 ವರ್ಷದ ಪೈಲಟ್ ಮನಿಶ್​ ಶಕ್ಯ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶೌರ್ಯ ಏರ್​ಲೈನ್ಸ್​ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು. ಟೇಕಾಫ್​ ಆಗುವಾಗ ರನ್​ವೇನಿಂದ ಜಾರಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದ ನಂತರ ವಿಮಾನದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.

error: Content is protected !!