
ನಗರದಲ್ಲಿ ಖೋಟಾ ನೋಟು ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಗುರುವಾರ (ಮಾರ್ಚ್ 20) ನಡೆದ ಈ ಘಟನೆ ಮಾಲೀಕರ ಎಚ್ಚರಿಕೆಯ ಕಾರಣದಿಂದ ಪತ್ತೆಯಾಗಿದೆ.
ಏನಾಯ್ತು ಘಟನೆಯಲ್ಲಿ?
ಬಂಧಿತ ಆರೋಪಿಗಳು ಮಂಜುನಾಥ ಮತ್ತು ರಮೇಶ್ ಎಂಬುವವರಾಗಿದ್ದಾರೆ. ಈ ಇಬ್ಬರು ಚಿಕನ್ ಬಿರಿಯಾನಿ ಸೇವಿಸಿ, 500 ರೂಪಾಯಿ ಮುಖಬೆಲೆಯ ನೋಟು ನೀಡಿ ಹೋಟೆಲ್ ಬಿಲ್ ಪಾವತಿಸಲು ಪ್ರಯತ್ನಿಸಿದರು. ಆದರೆ, ಹೋಟೆಲ್ ಮಾಲಿಕನಿಗೆ ನೋಟಿನ ಬಗ್ಗೆ ಅನುಮಾನ ಬಂದಿದ್ದು, ಅದನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಯಿತು.
ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಖೋಟಾ ನೋಟು!
ಆರೋಪಿಗಳು ಮನೋರಂಜನಾ ಉದ್ದೇಶಕ್ಕಾಗಿ ಬಳಕೆ ಮಾಡಲಾಗುವ “ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ” ಎಂಬ ನೋಟನ್ನು ಬಳಸಿದ್ದರು. ಹೋಟೆಲ್ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಮಾರ್ಕೆಟ್ ಯಾರ್ಡ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖೋಟಾ ನೋಟು ಜಾಲದ ಪ್ರಕರಣಗಳು ಹೆಚ್ಚಾಗುತ್ತಿವೆ
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಖೋಟಾ ನೋಟು ಜಾಲ ಸಕ್ರಿಯಗೊಂಡಿದ್ದು, ಕೆಲವು ದಿನಗಳ ಹಿಂದೆಯೇ ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿತ್ತು. ಈಗ ಮತ್ತೊಂದು ಪ್ರಕರಣ ದಾಖಲಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಪೊಲೀಸರು ಈ ನಕಲಿ ನೋಟು ಜಾಲದ ಮೂಲದತ್ತ ತನಿಖೆ ಚುರುಕುಗೊಳಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಆರೋಪಿಗಳು
ಈ ಸಂಬಂಧ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾರ್ವಜನಿಕರು ನೋಟುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.
(ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ಖೋಟಾ ನೋಟು ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.)