ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಅರಿತ ಅಧಿಕಾರಿಗಳು ತ್ವರಿತವಾಗಿ ಅವರ ಮನೆಗೆ ದೌಡಾಯಿಸಿದ್ದು, ಆ ಪತ್ರ ಪ್ರಧಾನಿ ಕಚೇರಿಗೆ ತಲುಪುವುದರೊಳಗೆ ಆಧಾರ್ ಸೇವೆ ಒದಗಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಯಲ್ಲಾಪುರ ಶಿರಸಿ ಗಡಿಭಾಗದಲ್ಲಿ ಕಾನಗೋಡು ಎಂಬ ಊರಿದೆ. ಅಲ್ಲಿನ ಸರಸ್ವತಿ ರಾಮ ಹೆಗಡೆ ಅವರು ಆಧಾರ್ ಕಾರ್ಡ ಮಾಡಿಸುವುದಕ್ಕಾಗಿ ಕಳೆದ 10 ವರ್ಷಗಳಿಂದ ಕಚೇರಿ ಅಲೆದಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ವೃದ್ಧರ ಮನೆಗೆ ತೆರಳಿ ಆಧಾರ್ ಕಾರ್ಡ ಮಾಡಿಸುವ ಯೋಜನೆರೂಪಿಸಿದರೂ, ಹರಿಯುತ್ತಿರುವ ಹಳ್ಳ ದಾಟಿ ಅಧಿಕಾರಿಗಳು ಸರಸ್ವತಿ ಹೆಗಡೆ ಅವರ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯ, ಕೊರೊನಾ ಕಾಲಘಟ್ಟ ಎಲ್ಲವನ್ನು ಮೀರಿ ಸರಸ್ವತಿ ಹೆಗಡೆ ಅವರು ಅಂಚೆ ಕಚೇರಿಗೆ ಅಲೆದಾಡಿದರೂ ಆಧಾರ್ ಕಾರ್ಡ ಸೇವೆ ಸಿಗಲಿಲ್ಲ.ಆಧಾರ್ ಕಾರ್ಡ ಬಗ್ಗೆ ವಿಚಾರಿಸುವುದಕ್ಕಾಗಿ ಸರಸ್ವತಿ ಹೆಗಡೆ ಅವರು ಆಧಾರ್ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ ಸೇರಿ ಎಲ್ಲಾ ಕಚೇರಿಗಳಿಗೂ ಸುತ್ತಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶಾಲೆಯ ಪ್ರಮಾಣ ಪತ್ರ ತರಬೇಕು ಎಂದು ಅಧಿಕಾರಿಗಳು ಸೂಚಿಸಿದ ಕಾರಣ ಶಾಲೆಗೆ ಭೇಟಿ ನೀಡಿದರು. ಆದರೆ, ಅಲ್ಲಿಯೂ ಸರಸ್ವತಿ ಹೆಗಡೆ ಅವರ ವರ್ಗಾವಣೆ ಪ್ರಮಾಣ ಪತ್ರ ಸರಿಯಾಗಿರಲಿಲ್ಲ. ಶಿಕ್ಷಕರು ನೀಡಿದ ಪ್ರಮಾಣ ಪತ್ರವನ್ನು ಅಧಿಕಾರಿಗಳು ಒಪ್ಪಲಿಲ್ಲ. ಹೀಗಾಗಿ, ಕೊನೆ ಪ್ರಯತ್ನವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಅದರ ಪ್ರತಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ರವಾನಿಸಿದರು.
ಈ ವಿಷಯ ಅರಿತ ಅಧಿಕಾರಿಗಳು ಸರಸ್ವತಿ ಹೆಗಡೆ ಅವರನ್ನು ಹುಡುಕಿ ಮನೆಗೆ ಬಂದರು. ಮಂಚಿಕೇರಿಯ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. ಸರ್ಕಾರದ ಎಲ್ಲಾ ಸೌಲಭ್ಯಗಳಿಗೂ ಆಧಾರ್ ಕೇಳುತ್ತಾರೆ. ಆದರೆ, ಆಧಾರ್ ಕಾರ್ಡ ಮಾತ್ರ ಯಾರೂ ಮಾಡಿಕೊಡುತ್ತಿಲ್ಲ ಎಂದು ಸರಸ್ವತಿ ಹೆಗಡೆ ಸಮಸ್ಯೆ ವಿವರಿಸಿದರು. 70 ವರ್ಷ ಹಿಂದಿನ ಶಾಲಾ ದಾಖಲೆ, ಚುನಾವಣಾ ಚೀಟಿ ಹಿಡಿದು ಹೋದರೆ ಈ ದಾಖಲೆ ಸಾಲುವುದಿಲ್ಲ ಎನ್ನುತ್ತಾರೆ. ಉಳಿದ ಯಾವ ದಾಖಲೆಯೂ ನನ್ನಲ್ಲಿಲ್ಲ. ನನ್ನ ಮರಣ ನಂತರ ಮಕ್ಕಳಿಗೆ ಮರಣ ಪತ್ರ ಸಿಗುವುದಕ್ಕಾದರೂ ಆಧಾರ್ ಅಗತ್ಯವಿದೆ’ ಎಂದವರು ಕಣ್ಣೀರಾದರು. ಆಧಾರ್ ಜೋಡಣೆ ಮಾಡದ ಕಾರಣ ರೇಶನ್ ಕಾರ್ಡ ಸಹ ರದ್ದಾಗಿರುವ ಬಗ್ಗೆ ಅಳಲು ತೋಡಿಕೊಂಡರು.
ಅಜ್ಜಿಗೆ ಸಮಾಧಾನ ಮಾಡಿದ ಉಪತಹಶೀಲ್ದಾರ್ ಎಚ್.ಎನ್ ರಾಘವೇಂದ್ರ ಅವರು ಅಲ್ಲಿಂದಲೇ ಆಧಾರ್ ಸಂಯೋಜಕರಿಗೆ ಫೋನ್ ಮಾಡಿದರು. ಗ್ರಾಮ ಆಡಳಿತಾಧಿಕಾರಿ ಶರಣು ತುಂಬಗಿ ಜೊತೆ ಸೇರಿ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ `ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ಆಧಾರ್ ಕೇಂದ್ರಕ್ಕೆ ಬನ್ನಿ. ಆಧಾರ್ ಕಾರ್ಡ ಮಾಡಿಕೊಡಿಸುವೆ’ ಎಂದು ಎಚ್ ಎನ್ ರಾಘವೇಂದ್ರ ಅವರು ಭರವಸೆ ನೀಡಿದರು. ಆಧಾರ್ ಸಂಯೋಜನ ಮಹಾಬಲೇಶ್ವರ ದೇಸಾಯಿ ಅವರಿಗೂ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಿರಸಿ ಕೇಂದ್ರದಿಂದ ಆಧಾರ್ ಕಾರ್ಡ ಕೊಡಿಸುವ ಬಗ್ಗೆ ನಿರ್ಣಯಿಸಿದರು. ಸದ್ಯ ಮಾರ್ಚ 27ರಂದು ಶಿರಸಿಗೆ ತೆರಳಿ ಆಧಾರ್ ಕಾರ್ಡ ಮಾಡಿಸುವುದಾಗಿ ಸರಸ್ವತಿ ಹೆಗಡೆ ಅವರ ಪುತ್ರ ಪ್ರಸಾದ ಹೆಗಡೆ ಮಾಹಿತಿ ನೀಡಿದ್ದಾರೆ.
ಚನ್ನಗಿರಿ: ಅಮಾನತುಗೊಂಡ ಗ್ರಂಥಾಲಯ ಮೇಲ್ವಿಚಾರಕರನ್ನು ಪುನರ್ನೇಮಕ ಮಾಡಿಸಲು ₹40,000 ಲಂಚ ಪಡೆಯುತ್ತಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ. ಉತ್ತಮ್…
ಮಹಾರಾಷ್ಟ್ರದ ನಲಸೋಪಾರ ಪೂರ್ವದ ಚಾಲ್ನಲ್ಲಿ ನಡೆದ ತೀವ್ರ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಎರಡು ವರ್ಷಗಳಿಂದ ನಿರಂತರ ಲೈಂಗಿಕ…
ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಕಿಶೋರ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ತಮ್ಮ ವರ್ಗಾವಣೆಗೆ…
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ 15 ಲಕ್ಷ ನಗದು ಕಳ್ಳತನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆ ಪೊಲೀಸರು ಇಬ್ಬರು…
ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಾಗಿರುವುದರಿಂದ ಜನರು ತೊಂದರೆಗೆ…
ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಕೃಷ್ಣಮೂರ್ತಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರಿಂದ…